ನೆಕ್ಸ್ಟ್ ಸಿಎಂ ನಾನೇ.. ಒಂದು ಚಾನ್ಸ್ ಕೊಡಿ ಎಂದ ಯತ್ನಾಳ್

ವಿಜಯಪುರ: ರಾಜ್ಯ ರಾಜಕಾರಣದಲ್ಲಿಯ ಕೆಲವು ಬೆಳವಣಿಗೆಗಳ ಮಧ್ಯೆ ರಾಜ್ಯದ ಮುಂದಿನ ಸಿಎಂ ನಾನೇ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೇಕೆ ಮುಖ್ಯ ಮಂತ್ರಿಯಾಗಬಾರದು? ಈ ರಾಜ್ಯದ ಹೊಸ ನಾಯಕನಾಗುವ ಎಲ್ಲ ಸಾಮರ್ಥ್ಯ ನನಗಿದೆ. ನನ್ನ ಇಡೀ ರಾಜಕೀಯ ಜೀವನದಲ್ಲಿ ನನ್ನ ವಿರುದ್ಧ ಒಂದೇ ಒಂದು ಭ್ರಷ್ಟಾಚಾರದ ಆರೋಪವಿಲ್ಲ ಎಂದು ಹೇಳಿದ್ದಾರೆ. ಬೊಮ್ಮಾಯಿ ಅಧಿಕಾರ ವಹಿಸಿಕೊಂಡ ನಂತರ ಯತ್ನಾಳ್ ನಾಯಕತ್ವ ಬದಲಾವಣೆ ಕುರಿತು ಮಾತನಾಡುತ್ತಿರುವುದು ಇದೇ ಮೊದಲಾಗಿದೆ. “ನಾನು ಯಾವುದೇ ಗಣಿಗಾರಿಕೆ ಹಗರಣದಲ್ಲಿ ಭಾಗಿಯಾಗಿಲ್ಲ ಅಥವಾ ನನ್ನ ವಿರುದ್ಧ ಅಕ್ರಮ ಆಸ್ತಿ ಗಳಿಕೆಯ ಯಾವುದೇ ಆರೋಪಗಳೂ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಬಯಸಿದರೆ ನನಗೆ ರಾಜ್ಯದ ಜವಾಬ್ದಾರಿ ನೀಡಬಹುದು. ಜೊತೆಗೆ ಮುಂದಿನ ಚುನಾವಣೆಯಲ್ಲಿ ಬಿಜೆಪಿಯು 130 ಸೀಟು ಗೆಲ್ಲುವಂತೆ ಮಾಡುವ ತಾಕತ್ತು ನನ್ನಲ್ಲಿದೆ. ಹೈಕಮಾಂಡ್ ನನಗೆ ನೇತೃತ್ವ ಕೊಟ್ಟರೆ ನಾನು ಚುನಾವಣೆ ಹೊಣೆಗಾರಿಕೆ ಹೊತ್ತು 130 ಸೀಟು ಗೆಲ್ಲಿಸುತ್ತೇನೆಂದು ತಿಳಿಸಿದ್ದಾರೆ.