ರಾಜ್ಯಾದ್ಯಂತ ಇಂದು ರೈತ ಸಂಘಟನೆಗಳಿಂದ ಕಪ್ಪು ದಿನಾಚರಣೆ

ಬೆಂಗಳೂರು: ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಮಸಿ ಎರಚಿ ಹಲ್ಲೆಗೈದ ಘಟನೆ ಖಂಡಿಸಿ ವಿವಿಧ ರೈತ ಸಂಘಟನೆಗಳ ಮುಖಂಡರು ಇಂದು (ಮೇ 31)ರಾಜ್ಯಾದ್ಯಂತ 'ಕಪ್ಪು ದಿನ' ಆಚರಿಸಲು ಕರೆ ನೀಡಿದ್ದಾರೆ.
ರಾಕೇಶ್ ಟಿಕಾಯತ್ ಮೇಲಿನ ದಾಳಿ ಇಡೀ ರೈತ ಸಮುದಾಯದ ಮೇಲಿನ ದಾಳಿಯಾಗಿದೆ. ಇದನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು. ವಿವಿಧ ರೈತ ಸಂಘಟನೆಗಳು ಈ ಪ್ರತಿಭಟನೆಗೆ ಬೆಂಬಲ ಸೂಚಿಸಿವೆ. ಕಪ್ಪು ಪಟ್ಟಿ ಧರಿಸಿ ರೈತರು ಹಾಗೂ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ರೈತರ ಮುಖಂಡರಾದ ಕೆ.ಟಿ ಗಂಗಾಧರ, ಬಡಗಲಪುರ ನಾಗೇಂದ್ರ, ಜಿ.ಸಿ ಅಯ್ಯಾ ರೆಡ್ಡಿ ತಿಳಿಸಿದ್ದಾರೆ.