ಜುಲೈ 26, 28ರಂದು ವಿಶೇಷ ರೈಲು - ಸಚಿವ ವಿ.ಸೋಮಣ್ಣ

ಜುಲೈ 26, 28ರಂದು ವಿಶೇಷ ರೈಲು - ಸಚಿವ ವಿ.ಸೋಮಣ್ಣ

ಬೆಂಗಳೂರು: ಕರ್ನಾಟಕದ ಕರಾವಳಿ ಪ್ರದೇಶ ಹಾಗೂ ಮಲೆನಾಡಿನ ಭಾಗದಲ್ಲಿ ಭಾರೀ‌ ಮಳೆ ಹಿನ್ನೆಲೆ ತಾತ್ಕಾಲಿಕವಾಗಿ ಎರಡು ವಿಶೇಷ ರೈಲು ಓಡಾಟಕ್ಕೆ ಕೇಂದ್ರದ ರಾಜ್ಯಖಾತೆ ಸಚಿವ ವಿ ಸೋಮಣ್ಣ ಸೂಚನೆ ನೀಡಿದ್ದಾರೆ. 

ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಅವರ ಮನವಿಗೆ ತಕ್ಷಣ ಸ್ಪಂದಿಸಿದ ಸಚಿವ ಸೋಮಣ್ಣ ಅವರು, ಜುಲೈ 26 ಮತ್ತು 28ರಂದು ಬೆಂಗಳೂರಿನಿಂದ ಕಾರವಾರಕ್ಕೆ ವಿಶೇಷ ರೈಲುಗಳು ಓಡಾಡಲಿವೆ. ಬೆಂಗಳೂರಿನಿಂದ 12:30 AM (ಮಧ್ಯರಾತ್ರಿ) ಹೊರಟು ಪಡೀಲ್ ಬೈಪಾಸ್ ಮೂಲಕ ಪ್ರಯಾಣಿಸುತ್ತವೆ. ಸುರತ್ಕಲ್, ಕುಂದಾಪುರ ಮತ್ತು ಮುರ್ಡೇಶ್ವರದಲ್ಲಿ ನಿಲುಗಡೆ ಹೊಂದಿವೆ. ಸಂಜೆ 4 ಗಂಟೆಗೆ (ಮರುದಿನ) ಕಾರವಾರ ತಲುಪಲಿವೆ. 

ಬಳಿಕ ಮತ್ತೆ, ಕಾರವಾರದಿಂದ ರಾತ್ರಿ 11:55 ಕ್ಕೆ ಹೊರಟು, ಮಧ್ಯಾಹ್ನ 3 ಗಂಟೆಗೆ (ಮರುದಿನ) ಬೆಂಗಳೂರಿಗೆ ತಲುಪಲಿದೆ. 

ಸಾರ್ವಜನಿಕರು ಹೆಚ್ಚುವರಿ ರೈಲು ಸೇವೆಗಳ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಚಿವರು ಮನವಿ ಮಾಡಿದ್ದಾರೆ.