ಹಿರಿಯ ಸ್ವಾತಂತ್ರ್ಯ ಸೇನಾನಿ, ಶತಾಯುಷಿ ಎನ್.ಆರ್ ಮಠದ್ ನಿಧನ

ಬೆಂಗಳೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎನ್.ಆರ್ ಮಠದ್ (101) ಇಂದು ವಿಧಿವಶರಾಗಿದ್ದಾರೆ. ಬೆಂಗಳೂರಿನ ರಾಜಾಜಿನಗರದ ತಮ್ಮ ನಿವಾಸದಲ್ಲಿ ಮಧ್ಯಾಹ್ನ 4 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.
ಎನ್.ಆರ್ ಮಠದ್ ಅವರು ಅಖಿಲ ಭಾರತ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಅಧ್ಯಕ್ಷರಾಗಿದ್ದರು. ಡಿಸೆಂಬರ್ 13, 1921ರಲ್ಲಿ ರಾಜಾಜಿನಗರದಲ್ಲಿ ಜನಿಸಿದ್ದರು. ಇವರು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು.
ಎನ್.ಆರ್. ಮಠದ್ ಅವರು ಗಾಂಧೀಜಿಯವರ ಅನುಯಾಯಿಯಾಗಿದ್ದರು. ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗಿಯಾಗಿ ಬ್ರಿಟಿಷರಿಂದ ಜೈಲುವಾಸ ಅನುಭವಿಸಿದ್ದರು. ಇವರೊಂದಿಗೆ ಕುಟುಂಬದ ಏಳು ಮಂದಿಯನ್ನ ಬ್ರಿಟಿಷರು ಬಂಧಿಸಿದ್ದರು.
ಈ ಹಿಂದೆ 1972 ಸಂದರ್ಭದಲ್ಲಿ ಪ್ರಧಾನಿಯಾಗಿದ್ದ ಶ್ರೀಮತಿ ಇಂದಿರಾ ಗಾಂಧಿಯವರು ಸ್ವಾತಂತ್ರ್ಯ ಹೋರಾಟಕ್ಕೆ ಮಠದ್ ನೀಡಿದ ಕೊಡುಗೆ ಗೌರವಿಸಿ ತಾಮ್ರ ಪತ್ರದ ಮೂಲಕ ಗೌರವಿಸಿದ್ದರು. 2019ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ದೆಹಲಿಯಲ್ಲಿ ಮಠದ್ ಅವರಿಗೆ ಸನ್ಮಾನ ಮಾಡಿದ್ದರು.