ಬೆಂಗಳೂರು: ಮಧ್ಯಾಹ್ನದ ಊಟಕ್ಕೆ ಶಾಲಾ ಮಕ್ಕಳಿಗೂ ಸಿಗಲಿದೆ ಸಿರಿಧಾನ್ಯಗಳ ರಸಪಾಕ

ಬೆಂಗಳೂರು: ಮಧ್ಯಾಹ್ನದ ಊಟಕ್ಕೆ ಶಾಲಾ ಮಕ್ಕಳಿಗೂ ಸಿಗಲಿದೆ ಸಿರಿಧಾನ್ಯಗಳ ರಸಪಾಕ

ಬೆಂಗಳೂರು: ಶ್ರೀಮಂತರಿಗೆ ಮಾತ್ರ ಸಿರಿಧಾನ್ಯ ಎಂಬ ಮಾತು ಇದೀಗ ಸುಳ್ಳಾಗುತ್ತಿದ್ದು, ಬಡವ ಬಲ್ಲಿದರೆನ್ನದೇ ಎಲ್ಲರಿಗೂ ಸಿರಿಧಾನ್ಯಗಳ ಅಮೃತ ಪಾಕ ಸವಿಯಲು ಅವಕಾಶ ಮಾಡಿಕೊಡಲು ಇದೀಗ ಸ್ವತ: ಸರ್ಕಾರವೇ ಮುಂದೆ‌ ಬಂದಿದೆ! 

ಹೌದು. ಬಡವರ ಅಗ್ಗದ ಆಹಾರ ಕೇಂದ್ರಗಳೆನ್ನಿಸಿದ ಇಂದಿರಾ ಕ್ಯಾಂಟೀನ್ ಮತ್ತು ಮಧ್ಯಾಹ್ನದ ಶಾಲಾ ಊಟದಲ್ಲಿ ಸಿರಿಧಾನ್ಯ ಬಳಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಹತ್ವದ ಘೋಷಣೆ ಮಾಡಿದರು. 

ಕೃಷಿ ಇಲಾಖೆಯ ವತಿಯಿಂದ ಅರಮನೆ ಮೈದಾನದಲ್ಲಿ ಆಯೋಜಿಸಲಾದ ಸಿರಿಧಾನ್ಯ ಮತ್ತು ಸಾವಯವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ- 2024 ಮತ್ತು ಸಿರಿಧಾನ್ಯ ತಿನಿಸುಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ರಾಜ್ಯದ ಜನರು ಮತ್ತು ಶಾಲಾ ಮಕ್ಕಳು ಇನ್ನಷ್ಟು ಸದೃಡವಾಗಿ , ಆರೋಗ್ಯವಂತರಾಗಲು ಇಂದಿರಾ ಕ್ಯಾಂಟೀನ್ ಮತ್ತು ಶಾಲಾ ಊಟದಲ್ಲಿ ಸಿರಿ ಧಾನ್ಯ ಬಳಸುವ ಸಂಬಂಧ ಸದ್ಯದಲ್ಲೇ ಸಂಬಂಧಪಟ್ಟ ಇಲಾಖೆಗಳ ಸಭೆ ಕರೆದು ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು. 

ಉತ್ತಮ ಗುಣಮಟ್ಟದ ಸಿರಿಧಾನ್ಯ ಬೀಜೋತ್ಪಾದನೆ, ಹೊಸ ತಳಿ ಅಭಿವೃದ್ಧಿ ಹಾಗೂ ಸಿರಿಧಾನ್ಯ ರಫ್ತಿಗೆ ಅನುಕೂಲ ಆಗುವಂತೆ ಸಿರಿಧಾನ್ಯ ಬೆಳೆಗೆ ಪ್ರೋತ್ಸಾಹದಾಯಕವಾಗಿ ಅಗತ್ಯ ಕೇಂದ್ರವನ್ನು ರಾಜ್ಯ ಸರ್ಕಾರ ಸ್ಥಾಪಿಸಲಿದೆ ಅಂತಾ ಸಿಎಂ ಅವರು ಹೇಳಿದರು. 

ಎಲ್ಲಿ ಮಳೆ ಕಡಿಮೆ ಬೀಳುತ್ತದೆಯೋ, ಭೂಮಿಯ ಫಲವತ್ತತೆ ಕಡಿಮೆ ಇರುವ ಪ್ರದೇಶಗಳಲ್ಲೂ ಬೆಳೆಯಬಹುದಾದ ಸಿರಿಧಾನ್ಯ ಉತ್ತಮ ಆರೋಗ್ಯಕ್ಕೆ ಬಹಳ ಸಹಕಾರಿ. ಇದಕ್ಕಾಗಿ ರಾಜ್ಯ ಸರ್ಕಾರ ನಿರಂತರವಾಗಿ ಸಿರಿಧಾನ್ಯ ಮೇಳವನ್ನು ಆಯೋಜಿಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. 

2004 ರಲ್ಲಿ ಸಾವಯವ ಕೃಷಿ ನೀತಿ, 2014 ರಲ್ಲಿ ಪರಿಷ್ಕೃತ ಸಾವಯವ ಕೃಷಿ ನೀತಿಯನ್ನು ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ. ಆ ಮೂಲಕ ಸವಯವ ಮತ್ತು ಸಿರಿಧಾನ್ಯ ಬೆಳೆ ಬೆಳೆಯಲು ನಮ್ಮ ಸರ್ಕಾರ ನಿರಂತರವಾಗಿ ಉತ್ತೇಜನ ನೀಡುತ್ತಿದೆ. ಇದರಿಂದ ಜನರ ಆರೋಗ್ಯಕ್ಕೂ ಬಹಳ ಸಹಕಾರಿಯಾಗುತ್ತಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು. ಇದೇ ಸಂದರ್ಭದಲ್ಲಿ ಸಾವಯವ ಕೃಷಿಯಲ್ಲಿ ವಿಶೇಷ ಸಾಧನೆ ತೋರಿದ ಪ್ರತಿಭೆಗಳಿಗೆ ಪ್ರಶಸ್ತಿ ನೀಡಿ ಸರ್ಕಾರದ ವತಿಯಿಂಗ ಗೌರವಿಸಲಾಯಿತು.