ಆನ್‌ಲೈನ್‌ ಫರ್ನಿಚರ್ ಸ್ಟೋರ್‌ ಪೆಪ್ಪರ್‌ಫ್ರೈ ಸಿಇಒ ಅಂಬರೀಶ್ ಮೂರ್ತಿ ಹೃದಯಾಘಾತದಿಂದ ಸಾವು

ಆನ್‌ಲೈನ್‌ ಫರ್ನಿಚರ್ ಸ್ಟೋರ್‌ ಪೆಪ್ಪರ್‌ಫ್ರೈ ಸಿಇಒ ಅಂಬರೀಶ್ ಮೂರ್ತಿ ಹೃದಯಾಘಾತದಿಂದ ಸಾವು

ನವದೆಹಲಿ: ದೇಶದ ಪ್ರಮುಖ ಆನ್‌ಲೈನ್‌ ಫರ್ನಿಚರ್ ಸ್ಟೋರ್‌ಗಳಲ್ಲಿ ಒಂದಾದ ಪೆಪ್ಪರ್‌ ಫ್ರೈ ಸಹ ಸಂಸ್ಥಾಪಕ ಹಾಗೂ ಮುಖ್ಯ ವ್ಯವಸ್ಥಾಪಕ ಅಧಿಕಾರಿ (ಸಿಇಒ)ಯಾಗಿದ್ದ ಅಂಬರೀಷ್ ವೇದಾಂತಂ ಮೂರ್ತಿ (49) ಅವರು ಸೋಮವಾರ ರಾತ್ರಿ ಹೃದಯಾಘಾತದಿಂದ ಸೋಮವಾರ ನಿಧನರಾಗಿದ್ದಾರೆ. 

“ನನ್ನ ಸ್ನೇಹಿತ, ಮಾರ್ಗದರ್ಶಕ, ಸಹೋದರ, ಆತ್ಮ ಸಂಗಾತಿ ಅಂಬರೀಶ್ ಮೂರ್ತಿ ಇನ್ನಿಲ್ಲ ಎಂದು ತಿಳಿಸಲು ತುಂಬಾ ದುಃಖವಾಗಿದೆ. ನಿನ್ನೆ ರಾತ್ರಿ ಲೇಹ್‌ನಲ್ಲಿ ಹೃದಯಾಘಾತದಿಂದ ಅವರನ್ನು ಕಳೆದುಕೊಂಡೆ. ದಯವಿಟ್ಟು ಅವರಿಗಾಗಿ ಮತ್ತು ಅವರ ಕುಟುಂಬ ಮತ್ತು ಹತ್ತಿರದವರಿಗೆ ಶಕ್ತಿಗಾಗಿ ಪ್ರಾರ್ಥಿಸಿ” ಎಂದು ಕಂಪನಿಯ ಇನ್ನೊಬ್ಬ ಸಹಸಂಸ್ಥಾಪಕ ಅಶಿಶ್ ಶಾ ಮಂಗಳವಾರ ಬೆಳಗ್ಗೆ ಟ್ವಿಟರ್ ಪೋಸ್ಟ್‌ ಮೂಲಕ ಖಚಿತಪಡಿಸಿದ್ದಾರೆ. 

ಆಪ್ತ ಮೂಲಗಳ ಪ್ರಕಾರ, ಲಡಾಕ್ ಪ್ರವಾಸಕ್ಕೆ ತೆರಳಿದ್ದ ಅಂಬರೀಶ್‌ ಮೂರ್ತಿ ಅವರಿಗೆ ಲೇಹ್‌ನಲ್ಲಿ ಸೋಮವಾರ ರಾತ್ರಿ ಹೃದಯಾಘಾತವಾಗಿದೆ. 2012ರಲ್ಲಿ ಆಶೀಶ್ ಶಾ ಜೊತೆಗೂಡಿ ಮುಂಬೈನಲ್ಲಿ ಆನ್‌ಲೈನ್‌ ಫರ್ನಿಚರ್ ಸ್ಟೋರ್‌ ಹಾಗೂ ಹೋಮ್‌ ಡೆಕೋರ್‌ ಕಂಪನಿ ಪೆಪ್ಪರ್‌ ಫ್ರೈ ಅನ್ನು ಸ್ಥಾಪನೆ ಮಾಡಿದ್ದರು. ಇಂದು ಇವರ ಕಂಪನಿ 500 ಮಿಲಿಯನ್‌ ಡಾಲರ್‌ ಮೌಲ್ಯದ ಬೃಹತ್‌ ಕಂಪನಿಯಾಗಿ ಬೆಳೆದಿದೆ.