ಹುಬ್ಬಳ್ಳಿಯಲ್ಲಿ ನಾಳೆ ಎಂದಿನಂತೆ ಬಸ್ ಸಂಚಾರ

ರೈತ ಸಂಘ ಹಾಗೂ ಮತ್ತಿತರ ಕೆಲ ಸಂಘಟನೆಗಳು ಭಾರತ್ ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಸೋಮವಾರ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವ್ಯಾಪ್ತಿಯ ಎಲ್ಲ ಬಸ್ ಡಿಪೋಗಳು ಮತ್ತು ನಿಲ್ದಾಣಗಳಿಂದ ಬಸ್ ಸಂಚಾರ ಎಂದಿನಂತೆ ಇರುತ್ತದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ. ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವ್ಯಾಪ್ತಿಯಲ್ಲಿ ಬರುವ ನಗರದಲ್ಲಿನ ಮೂರು ಗ್ರಾಮಾಂತರ ಡಿಪೋಗಳು ಹಾಗೂ ನವಲಗುಂದ ಮತ್ತು ಕಲಘಟಗಿ ಡಿಪೋಗಳಿಂದ ಎಂದಿನಂತೆ ಬಸ್ ಕಾರ್ಯಾಚರಣೆ ಮಾಡಲಾಗುತ್ತದೆ. ನಗರದ ಹೊಸೂರು ಹಾಗೂ ಗೋಕುಲ ರಸ್ತೆಯ ಬಸ್ ನಿಲ್ದಾಣ ನವಲಗುಂದ ಅಣ್ಣಿಗೇರಿ ತಡಸ ಕಲಘಟಗಿ ಕುಂದಗೋಳ ಮತ್ತಿತರ ನಿಲ್ದಾಣಗಳಿಂದ ಬಸ್ಸುಗಳು ಯಥಾ ಪ್ರಕಾರ ಓಡಾಡುತ್ತವೆ. ನಿತ್ಯದಂತೆ ಬಸ್ಸುಗಳ ಸಂಚಾರಕ್ಕೆ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.