NDTV: ಎನ್ಡಿಟಿವಿಗೆ ಹಿರಿಯ ಪತ್ರಕರ್ತ ರವೀಶ್ ಕುಮಾರ್ ರಾಜೀನಾಮೆ; ಅದಾನಿ ತೆಕ್ಕೆಗೆ ಕಂಪನಿ ಬಿದ್ದ ಬೆನ್ನಲ್ಲೇ ಬೆಳವಣಿಗೆ

ಹೊಸದಿಲ್ಲಿ: ಎನ್ಡಿಟಿವಿ (NDTV) ಚಾನಲ್ನಲ್ಲಿ ಶೇ.29.18ರಷ್ಟು ಷೇರುಗಳನ್ನು ಅದಾನಿ ಗ್ರೂಫ್ (Adani Group) ಸ್ವಾಧೀನಪಡಿಸಿಕೊಂಡ ಬೆನ್ನಲ್ಲೇ ಹಿರಿಯ ಪತ್ರಕರ್ತ ರವೀಶ್ ಕುಮಾರ್ (Ravish Kumar) ಎನ್ಡಿಟಿವಿಯಿಂದ ಹೊರಬಂದಿದ್ದಾರೆ. ಆರ್ಆರ್ಪಿಆರ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್ನ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಎನ್ಡಿಟಿವಿಯ ಸಂಸ್ಥಾಪಕರಾದ ಪ್ರಣಾಯ್ ರಾಯ್ ಹಾಗೂ ರಾಧಿಕಾ ರಾಯ್ ರಾಜೀನಾಮೆ ನೀಡಿದ ಮರುದಿನವೇ ಈ ಬೆಳವಣಿಗೆ ನಡೆದಿದೆ.
ಚಾನೆಲ್ನ ಆಂತರಿಕ ಮೇಲ್ ರವೀಶ್ ಕುಮಾರ್ ಅವರ ರಾಜೀನಾಮೆಯನ್ನು ಖಚಿತ ಪಡಿಸಿದೆ, ತಕ್ಷಣದಿಂದಲೇ ರಾಜೀನಾಮೆ ಜಾರಿಗೆ ಬಂದಿದೆ ಎಂದು ಎನ್ಡಿಟಿವಿ ತಿಳಿಸಿದೆ. ಈ ಬಗ್ಗೆ ಎನ್ಡಿಟಿವಿ ಗ್ರೂಪ್ನ ಅಧ್ಯಕ್ಷೆ ಸುಪರ್ಣಾ ಸಿಂಗ್ ಪ್ರತಿಕ್ರಿಯಿಸಿದ್ದು, ಕೆಲವೇ ಪತ್ರಕರ್ತರು ರವೀಶ್ ಕುಮಾರ್ ಅವರಂತೆ ಜನರು ಹಾಗೂ ಮಾಧ್ಯಮ ಕ್ಷೇತ್ರದ ಮೇಲೆ ಪ್ರಭಾವ ಬೀರಿದ್ದಾರೆ ಭಾರತ ಸೇರಿ ದೇಶ, ವಿದೇಶಗಳಲ್ಲಿ ಅವರು ಪಡೆದಿರುವ ಪ್ರತಿಷ್ಠಿತ ಪ್ರಶಸ್ತಿಗಳು ಅವರ ಕೆಲಸವನ್ನು ತಿಳಿಸುತ್ತವೆ ಎಂದು ಹೇಳಿದ್ದಾರೆ,
ರವೀಶ್ ಕುಮಾರ್ ದಶಕಗಳಿಂದ ಎನ್ಡಿಟಿವಿಯ ಅವಿಭಾಜ್ಯ ಅಂಗವಾಗಿದ್ದರು. ಎನ್ಡಿಟಿವಿಗೆ ಹಾಗೂ ಪತ್ರಿಕೋದ್ಯಮಕ್ಕೆ ಅವರ ಕೊಡುಗೆ ಅಪಾರವಾಗಿದೆ. ರವೀಶ್ ಕುಮಾರ್ ಅವರು ಈಗಿನಿಂದ ಹೊಸ ಆರಂಭಕ್ಕೆ ಸಜ್ಜಾಗಿದ್ದು, ಅದರಲ್ಲಿ ಅವರು ದೊಡ್ಡ ಪ್ರಮಾಣದಲ್ಲಿ ಯಶಸ್ವಿಯಾಗುತ್ತಾರೆ ಎಂಬುದು ನಮಗೆ ತಿಳಿದಿದೆ ಎಂದು ಎನ್ಡಿಟಿವಿ ಗ್ರೂಪ್ನ ಅಧ್ಯಕ್ಷೆ ಸುಪರ್ಣಾ ಸಿಂಗ್ ತಿಳಿಸಿದ್ದಾರೆ.
ಪ್ರತಿಷ್ಠಿತ ರಾಮನ್ ಮ್ಯಾಗೆಸ್ಸೆ ಪ್ರಶಸ್ತಿ ವಿಜೇತರಾದ ರವೀಶ್ ಕುಮಾರ್ ವಾರಾಂತ್ಯದ ಟಿವಿ ಶೋಗಳಾದ ಹಮ್ ಲೋಗ್, ರವೀಶ್ ಕೀ ರಿಪೋರ್ಟ್, ದೇಶ್ ಕೀ ಬಾತ್ ಮತ್ತು ಪ್ರೈಮ್ ಟೈಂ ಶೋಗಳನ್ನು ಎನ್ಡಿಟಿವಿಯಲ್ಲಿ ನಿರ್ವಹಿಸಿದ್ದರು. ಅದಲ್ಲದೇ ಎರಡು ಬಾರಿ ರಾಮನಾಥ್ ಗೋಯೆಂಕಾ ಎಕ್ಸಲೆನ್ಸ್ ಇನ್ ಜರ್ನಲಿಸಂ ಪ್ರಶಸ್ತಿಯನ್ನು ರವೀಶ್ ಕುಮಾರ್ ಪಡೆದಿರುವುದು ಅವರ ಮಾಧ್ಯಮ ಸೇವೆಗೆ ಸಾಕ್ಷಿಯಾಗಿದೆ.