ಹುಬ್ಬಳ್ಳಿ: ಆರ್ ಆ್ಯಂಡ್ ಡಿ ಕಾರ್ಯಪಡೆ ಅಧ್ಯಕ್ಷರಾಗಿ ಅಶೋಕ ಶೆಟ್ಟರ್ ನೇಮಕ- ಕೋರೆ ಅಭಿನಂದನೆ

ಹುಬ್ಬಳ್ಳಿ: ಆರ್ ಆ್ಯಂಡ್ ಡಿ ಕಾರ್ಯಪಡೆ ಅಧ್ಯಕ್ಷರಾಗಿ ಅಶೋಕ ಶೆಟ್ಟರ್ ನೇಮಕ- ಕೋರೆ ಅಭಿನಂದನೆ

ಹುಬ್ಬಳ್ಳಿ: ಕೈಗಾರಿಕಾ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ರಾಜ್ಯ ಸರ್ಕಾರ ರಚಿಸಿರುವ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಆ್ಯಂಡ್ ಡಿ) ಕಾರ್ಯಪಡೆಗೆ ಹುಬ್ಬಳ್ಳಿಯ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಅಶೋಕ ಶೆಟ್ಟರ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಡಾ. ಅಶೋಕ ಶೆಟ್ಟರ್ ಅವರ ನೇಮಕಕ್ಕೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹರ್ಷ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರ್ಯಪಡೆ ರಚಿಸಿ ಆದೇಶ ಹೊರಡಿಸಿದ್ದಾರೆ. ಈ ಕಾರ್ಯಪಡೆಗೆ ಸದಸ್ಯರಾಗಿ ಐಐಎಂ ಸಹ ಪ್ರಾಧ್ಯಾಪಕಿ ಶ್ರೀವರ್ಧಿನಿ ಝಾ, ಧಾರವಾಡದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿಯ ಪಾಧ್ಯಾಪಕ ಎಸ್. ಎಂ. ಶಿವಪ್ರಸಾದ, ಮೈಸೂರಿನ ಕೇಂದ್ರ ಆಹಾರ ಮತ್ತು ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ ಡಾ. ನಂದಿನಿ ಪ್ರಸಾದ ಶೆಟ್ಟಿ, ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಡೀನ್ ಪ್ರೊ. ರಾಜೇಶ ಸುಂದರೇಶನ್, ಐಐಎಸ್‌ಸಿ ಅತಿಥಿ ಸಂಶೋಧಕ ಮಧುಸೂಧನ ಅತ್ರೆ, ಸ್ಯಾಮ್‌ಸಂಗ್ ಆರ್ ಆ್ಯಂಡ್ ಡಿ ವಿಭಾಗದ ಮಲ್ಟಿಮೀಡಿಯಾ ವಿಭಾಗದ ಮುಖ್ಯಸ್ಥ ಬಾಲಾಜಿ ಹೋಳೂರ, ಕೆ.ಟು. ಟೆಕ್ನಾಲಜಿ ಕಂಪನಿಯ ಅನಂತ ಕೊಪ್ಪರ ಹಾಗೂ ಸೋಶಿಯಲ್ ಆ್ಯಂಡ್ ಎಕನಾಮಿಕ್ ಕೌನ್ಸಿಲ್ ಇನ್‌ಸ್ಟಿಟ್ಯೂಟ್‌ನ ಪ್ರೊ. ಮೀನಾಕ್ಷಿ ರಾಜೀವ ಅವರನ್ನು ನೇಮಿಸಲಾಗಿದೆ. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಉತ್ತೇಜನ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಕಾರ್ಯದರ್ಶಿಗಳಾಗಿದ್ದಾರೆ. ಅಶೋಕ ಶೆಟ್ಟರ್ ನೇತೃತ್ವದ ಕಾರ್ಯಪಡೆಯು ರಾಜ್ಯದ ಆರ್ ಆ್ಯಂಡ್ ಡಿ ನೀತಿ ಸಿದ್ಧಪಡಿಸಲು ಸರ್ಕಾರಕ್ಕೆ ನೆರವಾಗಲಿದೆ. ಇದಕ್ಕಾಗಿ ರಾಜ್ಯದಲ್ಲಿ ಖಾಸಗಿ ಮತ್ತು ಸಾರ್ವಜನಿಕ ವಲಯದ ಉದ್ಯಮ ಕ್ಷೇತ್ರಗಳಿಗೆ ಭೇಟಿ ನೀಡಲಿದೆ. ಶಾಲಾ ಹಂತದಿಂದ ಕಾಲೇಜು ಮತ್ತು ವಿಶ್ವವಿದ್ಯಾಲಯದವರೆಗೂ ಇದರ ಪ್ರಯೋಜನವಾಗುವಂತೆ ಗಮನಹರಿಸಲಿದ್ದು, ಭವಿಷ್ಯದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ವಿಶೇಷವಾಗಿ ಕೃಷಿ ಹಾಗೂ ಆಹಾರ ಕ್ಷೇತ್ರದಲ್ಲಿ ತಂತ್ರಜ್ಞಾನ, ಆವಿಷ್ಕಾರದ ಮಾರ್ಗಸೂಚಿಯನ್ನು ನೀಡಲಿದೆ ಎಂದು ತಿಳಿಸಲಾಗಿದೆ.