ಇಂದಿನಿಂದ ಶುರುವಾಯ್ತು ಸಿಇಟಿ-2022ರ ವಿದ್ಯಾರ್ಥಿಗಳ ದಾಖಲಾತಿ ಪರಿಶೀಲನೆ

ಇಂದಿನಿಂದ ಶುರುವಾಯ್ತು ಸಿಇಟಿ-2022ರ ವಿದ್ಯಾರ್ಥಿಗಳ ದಾಖಲಾತಿ ಪರಿಶೀಲನೆ

ಬೆಂಗಳೂರು: ಸಿಇಟಿ-2022ರ ವಿದ್ಯಾರ್ಥಿಗಳ ದಾಖಲಾತಿ ಪರಿಶೀಲನೆಯು ಇಂದಿನಿಂದ (ಆ.22) ಆರಂಭವಾಗಲಿದೆ. ಮೊದಲ ದಿನ ರ್‍ಯಾಂಕ್ 1ರಿಂದ 5 ಸಾವಿರ ವರೆಗೆ ಆನ್‌ಲೈನ್‌ ಮೂಲಕ ನಡೆಸಲಿದೆ. ಈ ಪ್ರಕ್ರಿಯೆಯು ಸೆಪ್ಟೆಂಬರ್‌ 7ರವರೆಗೆ ನಡೆಯಲಿದೆ. 

ಮೀಸಲಾತಿ ಪಡೆಯುವ ವಿದ್ಯಾರ್ಥಿಗಳು ಇದಕ್ಕಾಗಿ ಅರ್ಜಿಯಲ್ಲಿ ಸಲ್ಲಿಸಿರುವ ಪ್ರಮಾಣ ಪತ್ರಗಳನ್ನು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ದೃಢೀಕರಿಸಬೇಕಿದೆ. ವ್ಯಾಸಂಗ ಪ್ರಮಾಣ ಪತ್ರ, ಕನ್ನಡ ಮಾಧ್ಯಮ, ಗ್ರಾಮೀಣ ಅಭ್ಯರ್ಥಿಯ ಪ್ರಮಾಣ ಪತ್ರವನ್ನು ಪರಿಶೀಲನೆಗೆ ಒಳಪಡಿಸಬೇಕು. ಆ ನಂತರ ಬಿಇಒ ಇದನ್ನು ದೃಢೀಕರಿಸಿ ಕೆಇಎಗೆ ಅಪ್‌ಲೋಡ್‌ ಮಾಡಲಿದ್ದಾರೆಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ತಿಳಿಸಿದೆ. 

ಬೆಂಗಳೂರು ವ್ಯಾಪ್ತಿಯಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆಇಎ ಕಚೇರಿಯಲ್ಲೇ ಪರಿಶೀಲನೆಗೆ ಅವಕಾಶ ನೀಡಿದೆ. ವಿದ್ಯಾರ್ಥಿಗಳು ನೇರವಾಗಿ ಇಲ್ಲಿ ಬಂದು ಪರಿಶೀಲನೆಗೆ ಒಳಪಡಬಹುದಾಗಿದೆ. 

ಯುಜಿಸಿ ಇಸಿ 2022ರ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗೆ ದಾಖಲಾತಿ ಪರಿಶೀಲನೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಆನ್‌ಲೈನ್ ಮೂಲಕ ನಡೆಸಲು ಯೋಜಿಸಲಾಗಿದೆ. ಅದರಂತೆ ದಾಖಲಾತಿ ಪರಿಶೀಲನಾ ಕಾರ್ಯವು ಪ್ರಗತಿಯಲ್ಲಿದೆ. ಸುಮಾರು 1,71,000 ಅಭ್ಯರ್ಥಿಗಳು ಸೀಟು ಹಂಚಿಕೆ ಪ್ರಕ್ರಿಯೆಗೆ ಅರ್ಹರಿರುತ್ತಾರೆ.