ಆಟದ ಮೈದಾನವನ್ನ ಬಿಬಿಎಂಪಿಗೆ ಪಡೆಯಲು ಆರ್‌.ಅಶೋಕ್ ಪ್ರಯತ್ನಕ್ಕೆ ಹಿನ್ನೆಡೆ

ಆಟದ ಮೈದಾನವನ್ನ ಬಿಬಿಎಂಪಿಗೆ ಪಡೆಯಲು ಆರ್‌.ಅಶೋಕ್ ಪ್ರಯತ್ನಕ್ಕೆ ಹಿನ್ನೆಡೆ

ಬೆಂಗಳೂರು: ಪದ್ಮನಾಭನಗರ ಬಡಾವಣೆಯ ಮುಖ್ಯರಸ್ತೆಯಲ್ಲಿರುವ ಕಾರ್ಮೆಲ್‌ ಕನ್ನಡ ಶಾಲೆಗೆ ಅಂಟಿಕೊಂಡ ಅಂದಾಜು ಮೂರು ಸಾವಿರ ಚದರಡಿಯ ಆಟದ ಮೈದಾನವನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಪಡೆಯುವ ಕಂದಾಯ ಸಚಿವ ಆರ್. ಅಶೋಕ ಪ್ರಯತ್ನಕ್ಕೆ ಹಿನ್ನೆಡೆಯಾಗಿದೆ. ಆ ಜಾಗವನ್ನು ಹಸ್ತಾಂತರಿಸಬೇಕೆಂದು ಕೋರಿ ಬಿಬಿಎಂಪಿ, ಬಿಡಿಎಗೆ (ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ) ಬರೆದಿರುವ ಪತ್ರ ಮತ್ತು ಹಸ್ತಾಂತರ ಪ್ರಕ್ರಿಯೆಗೆ ಹೈಕೋರ್ಟ್‌ ಮಂಗಳವಾರ ಮಧ್ಯಂತರ ತಡೆ ನೀಡಿದೆ. ಜಯನಗರ ಕೋ-ಆಪರೇಟಿವ್‌ ಹೌಸಿಂಗ್ ಸೊಸೈಟಿ ಲಿಮಿಟೆಡ್‌ ಕಾರ್ಯದರ್ಶಿ ಎಂ.ಶಿವಣ್ಣ ಸಲ್ಲಿಸಿರುವ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ. ವಾದ ಆಲಿಸಿದ ಬಳಿಕ ನ್ಯಾಯಪೀಠ, ಬಿಬಿಎಂಪಿ ದಕ್ಷಿಣ ವಲಯದ ಯೋಜನಾ ವಿಭಾಗದ ಕಾರ್ಯಪಾಲಕ ಎಂಜಿನಿಯರ್, ಬಿಡಿಎ ಸಹಾಯಕ ಕಾರ್ಯಪಾಲಕ ಎಂಜನಿಯರ್ ಮತ್ತು ಬಿಡಿಎ ಪ್ರದೇಶಾಧಿಕಾರಿಗೆ ನೋಟೀಸ್‌ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿತು.