ಸಿ-17 ಮಿಲಿಟರಿ ವಿಮಾನ ಮೂಲಕ ದೆಹಲಿಗೆ ಬಂದಿಳಿದ 208 ಭಾರತೀಯರು
ನವದೆಹಲಿ: ಯುದ್ಧಪೀಡಿತ ಉಕ್ರೇನ್ ನೆಲದಿಂದ ಸಿ-17 ಮಿಲಿಟರಿ ವಿಮಾನ ಮೂಲಕ 208 ಭಾರತೀಯರು ದೆಹಲಿಗೆ ಬಂದಿಳಿದಿದ್ದಾರೆ. ದೆಹಲಿಯ ಹಿಂಡನ್ ವಾಯುನೆಲೆಗೆ ಬಂದಿಳಿದ ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಣಾ ಖಾತೆಯ ರಾಜ್ಯ ಸಚಿವ ಅಜಯ್ ಭಟ್ ಸ್ವಾಗತಿಸಿದ್ದಾರೆ. ಮಕ್ಕಳನ್ನು ಕಂಡು ಖುಷಿಯ ಕಣ್ಣೀರು ಹಾಕಿದ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಉಕ್ರೇನ್ನಲ್ಲಿ ರಷ್ಯಾ ಸೈನ್ಯ ಮಿಲಿಟರಿ ಕಾರ್ಯಾಚರಣೆ ಪ್ರಾರಂಭಿಸಿದ ನಂತರ, ಸಂಘರ್ಷ ಪೀಡಿತ ಉಕ್ರೇನ್ನಿಂದ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಮರಳಿ ಕರೆತರಲು ಭಾರತ ಸರ್ಕಾರವು 'ಆಪರೇಷನ್ ಗಂಗಾ'ವನ್ನು ಪ್ರಾರಂಭಿಸಿದೆ. ಈ ಕಾರ್ಯಕ್ಕೆ ಇದೀಗ ವಾಯುಪಡೆಯು ಜೊತೆಯಾಗಿದೆ. ಪೋಲೆಂಡ್, ರೊಮೇನಿಯಾ, ಹಂಗೇರಿ ಮತ್ತು ಸ್ಲೋವಾಕಿಯಾ ಗಡಿ ದಾಟಿದ ಬಳಿಕ ಭಾರತೀಯ ಪ್ರಜೆಗಳನ್ನು ಭಾರತಕ್ಕೆ ಕರೆತರಲಾಗುತ್ತಿದೆ. ಈ ನೆರೆಯ ದೇಶಗಳಿಂದಲೂ ಐಎಎಫ್ ವಿಮಾನಗಳು ಬರುತ್ತಿವೆ ಎಂದು ಮೂಲಗಳು ತಿಳಿಸಿವೆ.