ಬೋಯಿಂಗ್ 787 ವಿಮಾನಗಳ ತಾಂತ್ರಿಕ ದೋಷ : ಡಿಜಿಸಿಎ ಸಭೆಗೆ ಏರ್ ಇಂಡಿಯಾ ಮುಖ್ಯಸ್ಥನಿಗೆ ಬುಲಾವ್!

ನವದೆಹಲಿ: ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಮಂಗಳವಾರ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ನ ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದೆ.
ಈ ಸಭೆಯಲ್ಲಿ ಏರ್ ಇಂಡಿಯಾ ಎಂಜಿನಿಯರಿಂಗ್ ಮುಖ್ಯಸ್ಥ, ಎಂಡಿ ಮತ್ತು ಸಿಇಒ ಕ್ಯಾಂಪ್ಬೆಲ್ ವಿಲ್ಸನ್, ವಿಮಾನ ಕಾರ್ಯಾಚರಣೆಗಳ ನಿರ್ದೇಶಕ ಕ್ಯಾಪ್ಟನ್ ಪಂಕುಲ್ ಮಾಥುರ್, ಏರ್ ಇಂಡಿಯಾ ಎಕ್ಸ್ಪ್ರೆಸ್ ಸಿಇಒ ಅಲೋಕ್ ಸಿಂಗ್ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದಾರೆ.
ಈ ವರ್ಚುವಲ್ ಸಭೆಗೆ ಡಿಜಿಸಿಎ ಮಹಾನಿರ್ದೇಶಕ ಫಾಜಿ ಅಹ್ಮದ್ ಕಿದ್ವಾಯಿ ಅಧ್ಯಕ್ಷತೆ ವಹಿಸಿದ್ದರು ಎಂದು ವರದಿಯಾಗಿದೆ.
ಈ ಸಭೆ, ಜೂನ್ 12ರಂದು ಅಹಮದಾಬಾದ್ನಲ್ಲಿ ಸಂಭವಿಸಿದ ಭೀಕರ ವಿಮಾನ ದುರಂತದ ಬೆನ್ನಲ್ಲೇ ನಡೆದಿದ್ದು, ಬೋಯಿಂಗ್ 787 ಸರಣಿಯ ವಿಮಾನಗಳಲ್ಲಿ ತಾಂತ್ರಿಕ ದೋಷಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತುರ್ತು ಸಭೆ ಕರೆದಿದೆ. ಇದೇ ವೇಳೆ ಡಿಜಿಸಿಎ, ದೇಶದ ಎಲ್ಲಾ ವಿಮಾನ ತರಬೇತಿ ಸಂಸ್ಥೆಗಳಿಗೆ ಪ್ರಸ್ತುತ ತರಬೇತಿ ಕ್ರಮಗಳ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದೆ.