ನವದೆಹಲಿ : ಗೋವುಗಳೊಂದಿಗೆ ಸಂಕ್ರಾಂತಿ ಹಬ್ಬ ಆಚರಿಸಿದ ಪ್ರಧಾನಿ ಮೋದಿ

ನವದೆಹಲಿ : ಗೋವುಗಳೊಂದಿಗೆ ಸಂಕ್ರಾಂತಿ ಹಬ್ಬ ಆಚರಿಸಿದ ಪ್ರಧಾನಿ ಮೋದಿ

ನವದೆಹಲಿ : ಮಕರ ಸಂಕ್ರಾಂತಿ ದಿನವಾದ ಇಂದು ಪ್ರಧಾನಿ ಮೋದಿ ತಮ್ಮ ದೆಹಲಿಯ ನಿವಾಸದಲ್ಲಿ ಗೋವುಗಳಿಗೆ ಆಹಾರ ನೀಡಿದರು. ಹಸು ಮತ್ತು ಹೋರಿಗಳಿದ್ದ ರಾಸುಗಳಿಗೆ ಸಿಹಿ ತಿಂಡಿ ಮತ್ತು ಹುಲ್ಲು ತಿನ್ನಿಸಿದರು. ನಿವಾಸದ ಉದ್ಯಾನವನದಲ್ಲಿ ರಾಸುಗಳೊಂದಿಗೆ ಕೆಲ ಸಮಯ ಕಳೆದ ಮೋದಿ, ಪ್ರೀತಿಯಿಂದ ಜಾನುವಾರುಗಳನ್ನು ನೋಡಿಕೊಂಡರು. 

ಇದಕ್ಕೂ ಮೊದಲು, ಕೇಂದ್ರ ರಾಜ್ಯ ಸಚಿವ ಎಲ್.ಮುರುಗನ್ ನಿವಾಸದಲ್ಲಿ ಹಮ್ಮಿಕೊಂಡಿದ್ದ ಪೊಂಗಲ್ ಆಚರಣೆಯಲ್ಲಿ ಪ್ರಧಾನಿ ಭಾಗವಹಿಸಿದ್ದರು. ದಕ್ಷಿಣ ಭಾರತದ ಸಾಂಪ್ರದಾಯಿಕ ಉಡುಗೆಯಲ್ಲಿದ್ದ ಪ್ರಧಾನಿ, ಪೊಂಗಲ್ ಸಿಹಿ ಖಾದ್ಯ ತಯಾರಿಸುವ ಪ್ರಕ್ರಿಯೆಯಲ್ಲೂ ಪಾಲ್ಗೊಂಡಿದ್ದರು. ಬಳಿಕ ನಡೆದ ಕೆಲ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಆನಂದಿಸಿದರು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಮತ್ತು ತೆಲಂಗಾಣ ರಾಜ್ಯಪಾಲ ತಮಿಳ್ಸೈ ಸೌಂದರರಾಜನ್ ಜೊತೆಗಿದ್ದರು. 

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 'ಸತ್ಯಂ ಶಿವಂ ಸುಂದರಂ' ಹಾಡನ್ನು ಮನಮುಟ್ಟುವಂತೆ ಹಾಡಿದ ಬಾಲಕಿಗೆ ಮೋದಿ ತಾವು ಧರಿಸಿದ್ದ ಶಾಲನ್ನು ಉಡುಗೊರೆಯಾಗಿ ನೀಡಿದರು. ವೇದಿಕೆಯ ಮೇಲೆ ಹಾಡು ಮುಗಿಸಿದ ಬಾಲಕಿ ತೆರಳುತ್ತಿದ್ದಾಗ ಆಕೆಯನ್ನು ತಾವೇ ಕೈ ಸನ್ನೆ ಮಾಡಿ ಸಮೀಪ ಕರೆದರು. ಅದ್ಭುತವಾಗಿ ಗಾಯನ ನಡೆಸಿಕೊಟ್ಟ ಬಾಲಕಿಗೆ ಮೆಚ್ಚುಗೆ ಸೂಚಿಸಿ ಶಾಲನ್ನು ಕೊರಳಿಗೆ ಹಾಕಿ ಶಹಬ್ಬಾಸ್ ಹೇಳಿದರು. ಬಾಲಕಿ ಪ್ರಧಾನಿ ಕಾಲಿಗೆರಗಿ ನಮಸ್ಕರಿಸಿದಳು. 

ನೆರೆದಿದ್ದ ಜನರನ್ನುದ್ದೇಶಿಸಿ ಮಾತನಾಡಿದ ಮೋದಿ, ಹಬ್ಬವು ಏಕ ಭಾರತ ಶ್ರೇಷ್ಠ ಭಾರತದ ಭಾವನೆಯನ್ನು ಬಿಂಬಿಸುತ್ತದೆ. ದೇಶವು ನಿನ್ನೆ ಲೋಹ್ರಿ ಹಬ್ಬವನ್ನು ಆಚರಿಸಿತು. ಕೆಲವರು ಇಂದು ಮಕರ ಸಂಕ್ರಾಂತಿಯನ್ನು ಆಚರಿಸಿದರೆ, ಇನ್ನು ಕೆಲವರು ನಾಳೆ ಆಚರಿಸುತ್ತಾರೆ. ಮಾಘ ಬಿಹು ಹಬ್ಬ ಕೂಡ ಬರಲಿವೆ. ಹಬ್ಬಗಳು ನಮ್ಮನ್ನು ಒಂದುಗೂಡಿಸುವ ಶಕ್ತಿಯಾಗಿವೆ. ಜನತೆಯ ಬಾಳಲ್ಲಿ ಹಬ್ಬಗಳು ಸುಖ, ಸಮೃದ್ಧಿ, ನೆಮ್ಮದಿಯನ್ನು ತರಲಿ ಎಂದು ಹಾರೈಸಿದರು.