ಕೋವಿಡ್ ಹೆಚ್ಚಳದಿಂದ ಕಠಿಣ ಕ್ರಮ ಅನಿವಾರ್ಯ: ಲಾಕ್ ಡೌನ್ ಪ್ರಸ್ತಾಪವಿಲ್ಲ ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ. ಈ ಬಗ್ಗೆ ಆರೋಗ್ಯ ಸಚಿವರಿಗೂ ಸೂಚನೆ ನೀಡಿದ್ದೇನೆ. ಲಾಕ್ ಡೌನ್ ಪ್ರಸ್ತಾಪ ಇಲ್ಲ. ಲಾಕ್ ಡೌನ್ ಮಾಡುವುದಿಲ್ಲ. ಕ್ರಿಸ್ ಮಸ್ ಹಾಗೂ ಹೊಸ ವರ್ಷ ಸಂಭ್ರಮಾಚರಣೆ ವೇಳೆ ನಿರ್ಬಂಧ ಹೇರುವ ಬಗ್ಗೆ ತೀರ್ಮಾನ ಮಾಡಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನಾನು ಖಾಸಗಿ ಕಾರ್ಯಕ್ರಮ ಹಾಗೂ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಗೆ ಆಗಮಿಸಿದ್ದೇನೆ. ಕೋವಿಡ್ ವಿಚಾರದಲ್ಲಿ, ವಿದೇಶಿ ಪ್ರಯಾಣಿಕರನ್ನು ಸಂಪೂರ್ಣ ಟೆಸ್ಟ್ ಮಾಡಬೇಕೆಂದು ನಿರ್ಧಾರ ಮಾಡಿದ್ದೇವೆ. ಕಳೆದ ಭಾರಿ ವಿದೇಶಿ ಪ್ರವಾಸಿಗರಿಂದ ಸೋಂಕು ಹರಡಿತು. ಈ ಹಿನ್ನಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದೇವೆ ಎಂದರು. ಡಿ.2 ರಂದು ದೆಹಲಿಗೆ ಹೋಗುತ್ತಿರುವೆ. ಆರೋಗ್ಯ ಸಚಿವರನ್ನು ಭೇಟಿ ಮಾಡುವೆ. ಕೋವಿಡ್ ವಾರಿರ್ಯಸ್ ಗಳಿಗೆ ಬೂಸ್ಟರ್ ಡೋಸ್ ಕೊಡುವ ಬಗ್ಗೆ ಚರ್ಚೆ ಮಾಡುವೆ. ಈ ಕುರಿತು ಟಾಸ್ಕ್ ಪೋರ್ಸ್ ನಲ್ಲಿ ಕೂಡ ಚರ್ಚೆ ಮಾಡಲಿದ್ದೇವೆ. ಒಂದು ಡೋಸ್ ಎನ್ ಸಿಬಿಎಸ್ ಗೆ ಕಳುಹಿಸಲಾಗಿದೆ. ಅದರ ವರದಿ ಬಂದ ನಂತರ ಬೂಸ್ಟರ್ ಡೋಸ್ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು. ಕೇರಳದ ಬಾರ್ಡರ್ ಗಳಲ್ಲಿ ಹೆಚ್ಚಿನ ತಪಾಸಣೆ ಮಾಡುತ್ತೇವೆ. ಲಸಿಕೆ ಕಡ್ಡಾಯ ಇಲ್ಲ ಲಸಿಕಾಕರಣವನ್ನು ತೀವ್ರಗೊಳಿಸುತ್ತೇವೆ. ವಿದೇಶದಿಂದ ಬಂದವರನ್ನು ಒಂದು ವಾರ ಗಮನಿಸುತ್ತೇವೆ. ವಿದೇಶದಿಂದ ಬಂದವರಿಗೆ ಹಾಗೂ ಕೇರಳದಿಂದ ಬಂದವರಿಗೆ ನಿಗಾ ವಹಿಸಲು ಡಿಸಿಗಳಿಗೆ ಸೂಚನೆ ನೀಡಿದ್ದೇನೆ ಎಂದರು. ಹೊಸ ತಾಲೂಕುಗಳಿಗೆ ಮೂಲಸೌಕರ್ಯ ನೀಡದ್ದಕ್ಕೆ ಹೈಕೋರ್ಟ್ ಚಾಟಿ ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕೋವಿಡ್ ಬಂದ ಹಿನ್ನೆಲೆಯಲ್ಲಿ ತಡವಾಗಿದೆ. ಕನಿಷ್ಟ ಸೌಲಭ್ಯಗಳನ್ನು ನೀಡುತ್ತೇವೆ ಎಂದ ಅವರು, ಹಾವೇರಿಯಲ್ಲಿ ಬಂಡಾಯ ಅಭ್ಯರ್ಥಿ ಕಣಕ್ಕೆ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿ, ಅವರು ಬಿಜೆಪಿಯವರು ಅಲ್ಲ. ಒಮ್ಮೆ ಕಾಂಗ್ರೆಸ್ ಅಂತಾರೆ. ಇನ್ನೊಮ್ಮೆ ಬಿಜೆಪಿ ಅಭ್ಯರ್ಥಿ ಅಂತಾರೆ. ನಮ್ಮ ಅಭ್ಯರ್ಥಿ ಪ್ರದೀಪ್ ಶೆಟ್ಟರ್ ಕಣದಲ್ಲಿ ಇದ್ದಾರೆ ಎಂದರು. ಜೆಡಿಎಸ್ ಜೊತೆ ಮೈತ್ರಿ ವಿಚಾರವಾಗಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ದೇವೇಗೌಡರು ಹಾಗೂ ಪ್ರಧಾನಿಯವರು ನಿನ್ನೆ ಭೇಟಿ ಮಾಡಿ ಹಲವು ವಿಚಾರ ಚರ್ಚೆ ಮಾಡಿದ್ದಾರೆ. ರಾಜ್ಯದಲ್ಲಿ ಕುಮಾರಸ್ವಾಮಿ ಹಾಗೂ ಬಿಎಸ್ ವೈ ಚರ್ಚೆ ಮಾಡಿ ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಅವರು ಹೇಳಿದರು.