ಬೆಂಗಳೂರು: ತಪ್ಪಾಗಿ ಸಲ್ಲಿಸಿದ ಇ-ಖಾತಾ ಅರ್ಜಿಗಳನ್ನು ಹಿಂತೆಗೆದುಕೊಳ್ಳಲು ನಾಗರಿಕರಿಗೆ ಅವಕಾಶ - ಮುನೀಶ್ ಮೌದ್ಗಿಲ್
ಬೆಂಗಳೂರು: ತಪ್ಪಾಗಿ ಸಲ್ಲಿಸಲಾದ ಇ-ಖಾತಾ ಅರ್ಜಿಗಳನ್ನು ನಾಗರಿಕರು ಈಗ ಹಿಂತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್ ರವರು ತಿಳಿಸಿದ್ದಾರೆ.
ಬೆಂಗಳೂರು ನಗರದ ನಾಗರಿಕ ಸೇವೆಗಳ ಸುಧಾರಣೆಯನ್ನು ಉದ್ದೇಶಿಸಿ ಇ-ಖಾತಾ ವ್ಯವಸ್ಥೆಯಲ್ಲಿ ಮಾಡಲಾದ ಇತ್ತೀಚಿನ ಪರಿಷ್ಕರಣೆಗಳು ಮತ್ತು ಅಭಿವೃದ್ಧಿಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಲು ಟೌನ್ ಹಾಲ್ನಲ್ಲಿ ಇಂದು ವಿಶೇಷ ಆಯುಕ್ತರ ನೇತೃತ್ವದಲ್ಲಿ ಕಾರ್ಯಾಗಾರವನ್ನು ನಡೆಸಲಾಯಿತು.
ನಗರದಲ್ಲಿ ಸುಮಾರು 13.05 ಲಕ್ಷ SAS ಐಡಿ ಆಧಾರಿತ ಆಸ್ತಿಗಳೊಂದಿಗೆ ಸಂಬಂಧಿಸಿದ ನಾಗರಿಕರು ಈಗ ಸುಲಭವಾಗಿ ತಮ್ಮ ಇ-ಖಾತಾ ಪ್ರಮಾಣಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಮತ್ತು ಅಂತಿಮ ಇ-ಖಾತಾಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಯಿತು. ಇದರಿಂದ ಹಸ್ತಚಾಲಿತ ನಡೆಯುವ ಪ್ರಕ್ರಿಯೆಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ.
ಇ-ಖಾತಾ ಅರ್ಜಿ ಮತ್ತು ಅನುಮೋದನಾ ಪ್ರಕ್ರಿಯೆಯನ್ನು ಸರಳ, ಪಾರದರ್ಶಕ ಮತ್ತು ಬಳಕೆದಾರ ಸ್ನೇಹಿಯಾಗಿ ರೂಪಿಸಲಾಗಿದೆ. ಡಿಜಿಟಲ್ ಆಡಳಿತ, ದಕ್ಷತೆ ಮತ್ತು ನಾಗರಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವುದಕ್ಕೆ ಆಡಳಿತ ಬದ್ಧವಾಗಿದೆ ಎಂಬುದನ್ನು ಅವರು ಒತ್ತಿ ಹೇಳಿದರು.
ಈ ಕಾರ್ಯಾಗಾರದಲ್ಲಿ 5 ನಗರ ಪಾಲಿಕೆಗಳ ಎಲ್ಲಾ ವಲಯಗಳ ಜಂಟಿ ಆಯುಕ್ತರು, ಕಂದಾಯ ಇಲಾಖೆಯ ಜಂಟಿ ಆಯುಕ್ತರು, ಉಪ ಆಯುಕ್ತರು, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.