ಎಸ್‍ಡಿಎಂ ಕಾಲೇಜಿನ ಎಲ್ಲಾ ಸೋಂಕಿತರು ಗುಣಮುಖ

ಎಸ್‍ಡಿಎಂ ಕಾಲೇಜಿನ ಎಲ್ಲಾ ಸೋಂಕಿತರು ಗುಣಮುಖ

ಧಾರವಾಡ: ಧಾರವಾಡ ಎಸ್‍ಡಿಎಂ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ 306 ಕೋವಿಡ್ ಸೋಂಕಿತರು ಸಂಪೂರ್ಣ ಗುಣಮುಖರಾಗಿದ್ದು, ಈಗ ಮಹಾವಿದ್ಯಾಲಯದಲ್ಲಿ ಯಾವುದೇ ಸಕ್ರೀಯ ಕೋವಿಡ್ ಪ್ರಕರಣಗಳು ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು, ಎಸ್‍ಡಿಎಂ ಮಹಾವಿದ್ಯಾಲಯದಲ್ಲಿ ಕಂಡು ಬಂದಿದ್ದ ಕೋವಿಡ್ ಸೋಂಕಿತರು ಸಂಪೂರ್ಣ ಗುಣಮುಖರಾಗಿದ್ದು, ಆರೋಗ್ಯವಾಗಿದ್ದಾರೆ. ಇಂದು (ಡಿ.13) ಧಾರವಾಡ ಜಿಲ್ಲೆಯಲ್ಲಿ ಕೇವಲ 2 ಕೋವಿಡ್ ಸೋಂಕಿತರು ಕಂಡುಬಂದಿದ್ದು, ಒಟ್ಟು 57 ಸಕ್ರೀಯ ಪ್ರಕರಣಗಳು ಇವೆ ಎಂದು ಅವರು ಹೇಳಿದರು. ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ರೋಗ ನಿರೋದಕ ಲಸಿಕಾಕರಣ ಉತ್ತಮವಾಗಿ ಸಾಗಿದ್ದು, ಸಾರ್ವಜನಿಕರು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ನಗರ ಹಾಗೂ ಗ್ರಾಮೀಣ ಸೇರಿದಂತೆ ಶೇ. 97 ರಷ್ಟು ಮೊದಲ ಡೋಸ್ ಲಸಿಕಾಕರಣ ಮಾಡಲಾಗಿದೆ. 2ನೇ ಡೋಸ್ ಲಸಿಕಾಕರಣವು ಪ್ರಗತಿಯಲ್ಲಿದೆ. ಸಾರ್ವಜನಿಕರು ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಬೇಕು ಮತ್ತು ಸಾಧ್ಯವಾದಷ್ಟು ಸಾಮಾಜಿಕ ಅಂತರವನ್ನು ಕಾಪಾಡಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು. ವಿಶ್ವ ಆರೋಗ್ಯ ಸಂಸ್ಥೆಯು ಗುರುತಿಸಿರುವ ಹೈರಿಸ್ಕ್ ಹೊಂದಿರುವ ಮತ್ತು ಅಡ್ವೈಸರಿ ಇರುವ 14 ರಾಷ್ಟ್ರಗಳಿಂದ ಯಾವುದೇ ವ್ಯಕ್ತಿಗಳು ಜಿಲ್ಲೆಗೆ ಬಂದಿರುವುದಿಲ್ಲ. ಆದರೆ ಹೈರಿಸ್ಕ್ ಹೊಂದಿರದ ಹೊರರಾಷ್ಟ್ರದಿಂದ ಓರ್ವ ವ್ಯಕ್ತಿ ಜಿಲ್ಲೆಗೆ ಆಗಮಿಸಿದ್ದು, ಅವರಿಗೆ ಕೋವಿಡ್ ಮಾರ್ಗಸೂಚಿಗಳ ಪ್ರಕಾರ ಕೋವಿಡ್ ಟೆಸ್ಟಿಂಗ್ ಮಾಡಿ ಪ್ರತ್ಯೇಕವಾಗಿ ಇಡಲಾಗಿದೆ. ಅವರಲ್ಲಿ ಕೋವಿಡ್ ಸೋಂಕು ಕಂಡು ಬಂದಿದ್ದು, ಬಂದಾಗಿನಿಂದಲೂ ಹೋಂ ಐಸೋಲೇಷನ್‍ನಲ್ಲಿ ಇದ್ದು, ಆರೋಗ್ಯವಾಗಿದ್ದಾರೆ. ಆರೋಗ್ಯ ಇಲಾಖೆಯ ಸಿಬ್ಬಂದಿ ಪ್ರತಿದಿನ ಈ ಕುರಿತು ಜಾಗೃತಿ ವಹಿಸಿ ಅಗತ್ಯವಿರುವ ಚಿಕಿತ್ಸೆ, ಆರೋಗ್ಯ ಸಲಹೆ ನೀಡುತ್ತಿದ್ದಾರೆ. ಯಾವುದೇ ರೀತಿಯ ಭಯ, ಆತಂಕ ಪಡುವ ಅಗತ್ಯವಿಲ್ಲ. ಅವರು ಸಹ ಶೀಘ್ರದಲ್ಲಿ ಗುಣಮುಖರಾಗಿ ಹೊರಬರಲಿದ್ದಾರೆ ಎಂದು ಅವರು ಹೇಳಿದ್ದಾರೆ. ಪ್ರತಿದಿನ ಸುಮಾರು 250 ತಂಡಗಳಿಂದ ಎಲ್ಲ ಸರ್ಕಾರಿ ಆಸ್ಪತ್ರೆ ಹಾಗೂ ಪ್ರಮುಖ ಸ್ಥಳಗಳಲ್ಲಿ ಲಸಿಕಾಕರಣ ಮಾಡಲಾಗುತ್ತಿದೆ. ಮತ್ತು ಪ್ರತಿದಿನ ನಾಲ್ಕುಸಾವಿರಕ್ಕೂ ಅಧಿಕ ಕೋವಿಡ್ ಟೆಸ್ಟ್‍ಗಳನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.